about me

Saturday 14 March 2015

ಮೌನ...!

ಶ್....! ಎಂದು ಕ್ಲಾಸಿಗೆ ಬಂದ ಟೀಚರ್ , ಬಾಯಿ ಮೇಲೆ ಬೆರಳಿಟ್ಟಾಗ ತರಗತಿಯೆಲ್ಲಾ " ಗಪ್ ಚುಪ್ " ಎಂದು ವಿದ್ಯಾರ್ಥಿಗಳೆಲ್ಲಾ ಸದ್ದಿಲ್ಲದೆ ಕುಳಿತುಕೊಳ್ಳುವ ಕ್ರಿಯಾ ವಿಶೇಷಣವನ್ನು ಮೌನ ಎಂದು ಕರೆಯಲು ಅಷ್ಟು ಸಮಂಜಸವಲ್ಲ ಎನಿಸುತ್ತದೆ . ಏಕೆಂದರೆ ಅದು ಸದ್ದನ್ನು ಹದ್ದುಬಸ್ತಿನಲ್ಲಿಟ್ಟ ಕಾಲವಾಗಿರುವುದರಿಂದ ' ನಿಶ್ಯಬ್ಧ' ಎನ್ನಲಡ್ಡಿಯಿಲ್ಲ.
ಮೌನವೆಂಬುದು ಮನಸಿನ ಮಾತು . ಅದನ್ನು ಕಿವಿಯ ಬಳಿ ಕೂಗಿ ಹೇಳುವಂತದ್ದಲ್ಲ. ಕಣ್ಣಲ್ಲಿ ಕಣ್ಣಿಟ್ಟು ನೋಡಿ ಅನುಭವಿಸುವ ಸದ್ದಲ್ಲದ ಸದ್ದೇ ಈ ಮೌನ ಎಂಬುದು ಅನುಭವಿಸಿದವರ ಅನುಭವ ಅಂಬೋಣ . ಹೇಳುವ ಮಾತಿನಲ್ಲಿ ಅರ್ಥವೊಂದಿದ್ದರೆ , ಹೇಳದ ಮಾತಿನ ಮೌನದಲ್ಲಿ ನೂರಾರು ಅರ್ಥಗಳಿರುತ್ತವೆ. " ಮಾತು ಬೆಳ್ಳಿ , ಮೌನ ಬಂಗಾರ " ಎನ್ನುವುದು ಇದಕ್ಕೆ ಇರಬಹುದೇನೊ...?. ಪ್ರೇಮಿಗಳಿಗೆ ಕೇಳಿದರೆ ಬಹುಶಃ ಮೌನದ ಮಾತು ಅರ್ಥವಾಗಬಲ್ಲದು.
ಕಣ್ಣಂಚಲ್ಲೇ ಕರೆದು ಕೂರಿಸುವ, ತುಟಿಯಂಚಲ್ಲೇ ನಕ್ಕು ಮತ್ತು ಬರಿಸುವ ಮಾಟದ ಶಕ್ತಿ ಮೌನಕ್ಕಿದೆ. ಕೆಲವೊಮ್ಮೆ ಎಷ್ಟೋ ಪ್ರಶ್ನೆಗಳಿಗೆ ಮೌನವೇ ಉತ್ತರವಾಗಿಬಿಡುತ್ತದೆ. ಹಿರಿಯರು ಹೇಳಿದ ಹಾಗೆ ' ಮೌನಂ ಸಮ್ಮತಿ ಲಕ್ಷಣಂ ' ಎಂಬುದು ಹೆಚ್ಚು ಸಂದರ್ಭಗಳಲ್ಲಿ ಅನ್ವಯಿಸಿಬಿಡುತ್ತದೆ. ಹಾಗಂದ ಮಾತ್ರಕ್ಕೆ ಮಾತೇ ಆಡಬಾರದು ಅಂತಲ್ಲ , ಅಥವಾ ಮಾತಿಗೆ ಬೆಲೆಯಿಲ್ಲ ಅಂತೇನಿಲ್ಲ. ಮಾತು ಆಡಲೇಬೇಕಾದ ಸಂದರ್ಭದಲ್ಲಿ ಮೌನ ಸಲ್ಲದು. ಹಾಗೆಯೇ ಎಷ್ಟೋ ಸಂದರ್ಭಗಳಲ್ಲಿ ಮೌನವೇ ವಾಸಿ ಎನಿಸಿಬಿಡುತ್ತದೆ.
ನಿಜಕ್ಕೂ ಮೌನವೆಂಬುದು ನಮ್ಮೆಲ್ಲರ ಮನಸ್ಸಿಗೆ ಟಾನಿಕ್ ಇದ್ದಂತೆ . ಮೌನವೆಂಬುದು ಧ್ಯಾನವಿದ್ದಂತೆ .ಮೌನವು ಮನಸ್ಸಿನ ಶಸ್ತ್ರದಂತೆ. ಅದು ಒಳಗೇ ಸಾಣೆ ಹಿಡಿದು ಹರಿತಾದಷ್ಟು ಒಳಗಿನ ಅಂತ:ಶಕ್ತಿ ಇಮ್ಮಡಿಯಾಗಬಲ್ಲದು. ಆತ್ಮವಿಶ್ವಾಸ ವೃದ್ಧಿಸಬಲ್ಲದು, ಯಾವುದೇ ವಿಚಾರವನ್ನು ಅಳೆದು ತೂಗಿ ನೋಡುವ ಕ್ಷಮತೆ ಹೆಚ್ಚಬಲ್ಲದು, ಮನಸ್ಸಿನಲ್ಲೇ ತರ್ಕಿಸಿ ತಕ್ಕುದಾದ ಮುತ್ತಿನಂತ ಮಾತು ಹೊರಬರಬಲ್ಲದು. ಹತ್ತು ಮಾತು ಹೇಳುವ ಬದಲು ಒಂದು ಮುತ್ತಿನಂಥ ಮಾತು ಬರುವುದು ಮನಸ್ಸು ವಿಚಾರಗಳಲ್ಲಿ ಪಕ್ವಗೊಂಡಾಗ . ವ್ಯಕ್ತಿ ಹೆಚ್ಚು ಮೌನಿಯಾದಷ್ಟು ಆತನ ಮನಸ್ಸು ಹೆಚ್ಚು ಧೃಡವಾಗುತ್ತಾ ಗಟ್ಟಿಗೊಳ್ಳುವ ಸಾಧ್ಯತೆ ಹೆಚ್ಚು ಅಂದಮೇಲೆ ಮೌನಕ್ಕೂ ಮಾತಿದೆ ಎಂದಾಯ್ತು...!!!

ಸಿಗಬಾರದೆ

ಇನ್ನೂ ಎಷ್ಟು ಹುಡುಕುವುದು ಸಿಗಬಾರದೆ
ಗೆಲ್ಲಲಾರದಷ್ಟು ಸೋತಿಹೆನು ನೀ ಸಿಗದೆ
ನಿನ್ನದೇ ಗೆಲುವೆಂದುಕೊಂಡು ಒಮ್ಮೆ ಸೋಲಬಾರದೆ
ಪ್ರೀತಿಯಲ್ಲಷ್ಟೇ ಸೋಲಬಹುದು ಮತ್ತೆ ಮತ್ತೆ

ಬಿಗುಮಾನದ ಮೋಡ ಸರಿದು
ಪ್ರೀತಿಯ ಆಶಾಕಿರಣ ಮೂಡಿ
ಬಾಳೆಲ್ಲಾ ಬೆಳಗಲಿ...
ಅನುರಾಗದ ಕಾರ್ಮೋಡ ಕವಿದು
ಪ್ರೇಮದ ಮಳೆ ಹನಿ ಹನಿಯಾಗಿ
ತುಂತುರು ಬೀಳಲಿ.

ಇರಬಹುದು ಹೂವಿನ ಮೇಲೆ ಮಂಜು
ಇರದಿರಲಿ ಪ್ರೀತಿಯಲ್ಲೆಂದೆಂದು ನಂಜು
ಆಣೆ ಪ್ರಮಾಣ ಬೆಟ್ಟದಷ್ಟು ಮಾಡಿ
ಕೊಡಬಹುದು ಭರವಸೆಯ
ಜೊತೆಗಿರುವೆ ಬಿಡು ನಿರಾಶೆಯ
ಬದುಕು ಬಡವಾದರೂ
ಪ್ರೀತಿ ಬಡವಾಗದಿರಲಿ.

ಮಾಡಬೇಕಾಗಿಲ್ಲ ಯುದ್ಧ .

ಗುಂಡಿಗೆಯೊಳಗೊಂದು ಬಂಡಿ ನೆತ್ತರು
ಕೊತಕೊತನೆ ಕುದಿಯುತಿರಲು
ಆ ಕ್ರೌರ್ಯದ ಗೆರೆ ದಾಟಿ
ನಡೆಯಬಹುದೇನೋ ಮತ್ತೊಮ್ಮೆ
ಮಹಾಭಾರತ ...?

ಮದ, ಮತ್ಸರ, ಕಾಮ, ಕ್ರೋಧ
ಅಂತರಂಗದಲ್ಲಿ ಧಗಧಗಿಸುತಿರಲು
ಈ ರಣರಂಗದಲಿ ಖಡ್ಗವಿಡಿದು ನಿಲ್ಲಲು
ಎಂಟೆದೆಯೇನೂ ಬೇಕಾಗಿಲ್ಲ ..

ಪ್ರೀತಿ , ಮಮತೆ, ಸ್ನೇಹ , ತ್ಯಾಗ
ಎಲ್ಲವನ್ನೂ ಗೆಲ್ಲಬಹುದು
ಹೃದಯದ ತುಂಬಾ ಪ್ರೀತಿ ಇರಲು
ಮಾಡಬೇಕಾಗಿಲ್ಲ ಯಾವ ಯುದ್ಧವನ್ನು...!

Monday 2 March 2015

ಹೇಗೋ ಇದ್ದೆ...!!

ಪೂರ್ತಿ ಹಾಳಾಗಿರಲಿಲ್ಲ ಹೇಗೋ ಇದ್ದೆ
ಕಂಡ ಮೇಲೆ ನಿನ್ನ ಕಳೆದುಕೊಂಡೆ ನಿದ್ದೆ
ಇನ್ನೇನು ಉಳಿದಿಲ್ಲ ನೋಡೊಮ್ಮೆ ನೀನು
ಎದೆಯ ಮೇಲೆ ಕೈಯನ್ನಿಡು ಬದುಕುವೆನು ನಾನು

ಸಲೀಸಾಗಿ ಮೋಸ ಹೋಗುವ ಮುನ್ನ
ಬರಸೆಳೆದು ತಬ್ಬಿಕೊಳ್ಳುವೆ ನಿನ್ನ
ನೀನೇ ಹೇಳು ಇನ್ನೆಷ್ಟು ದೂರದಲ್ಲಿ
ನಿಂತುಕೊಳ್ಳಲಿ ನಾನು

ತೀರಾ ಹೊಸದೇನಲ್ಲ ನಿನ್ನೊಡನಾಟ
ಸಾಕು ಮಾಡು ಸಲುಗೆಯಿಂದಲೇ
ಕಾಡದಿರು ನೋಡದಿರು ವಾರೆ ನೋಟದಲೇ
ತುಂಬಿಕೊಂಡಿರುವೆನು ನಿನ್ನೇ

ಬೇಸರಿಕೆಯ ಸರಿಸಿ ಇರಿಸಿಕೊ
ಸನಿಹಕೆ ಬಂದು ಒರಗಿಕೊ
ಹೆಗಲಿಗೊಂದು ಗುಟ್ಟು ಹೇಳುವೆ
ಕಣ್ಣು ಮುಚ್ಚಿ ಕೇಳಿಕೊ ಸುಮ್ಮನೆ
ಕೆನ್ನೆಗೊಂದು ಮುತ್ತನಿಡುವೆ
ಇತ್ತಬಾರದೆ...ಎತ್ತಲೂ ಹೋಗದೇ ..!!

ನಮ್ಮದೇ ಬದುಕು .

ಸುಮ್ಮನಿರದ ಮನಸ್ಸಲ್ಲಿಂದು ಮತ್ತದೇ ಮೌನ
ಹೃದಯ ಮನಬಿಚ್ಚುವಾಗ
ಮನಸ್ಸಿಗೇಕೊ ತಲ್ಲಣ
ದೂರದಲ್ಲೆಲ್ಲೋ ಮತ್ತೊಂದು ಹೃದಯ ಕೂಗಿದಂತೆ
ಎರಡು ಹೃದಯಗಳ ಮೌನ ಸಂಭಾಷಣೆ
ನುಡಿದವು ಮನಸುಗಳು ಅವೆಷ್ಟೋ ಆಣೆ

ಈ ಜನುಮಕು ಇನ್ನೊಂದು ಜನುಮಕು
ನಂಟಿರುವುದು ನಿಜವಾದರೆ ಸಾಕು
ನೀ ಬಿಟ್ಟು ಹೋದ ಮರುಗಳಿಗೆಯೇ
ಇನ್ನೊಂದು ಜನ್ಮಕು ನಾನಾಗಿಯೇ
ಹಠವ ಮಾಡಿ ಮತ್ತೆ ಹುಟ್ಟುವೆನು
ಕನಸುಗಳ ಕದಿಯಲು ಬರುವೆನು

ತಿರುಗಿ ನೋಡದಿರು ನಾ ಹಿಂದೆ ಬಾರೆನು
ತಿರುತಿರುಗಿ ನೋಡಿದರು ನಾನಿರುವೆನು
ಕೊರಗಿ ಮರುಗದಿರು ಜಗವೇ ನಮ್ಮದು
ನಮ್ಮಯ ಜಗದಲಿ ನಮ್ಮದೇ ಬದುಕು
ನಮ್ಮದೇ ಬದುಕು ...